== ಸ್ಥಳ == ಈ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೇಟೆಯಿಂದ ವಾಯುವ್ಯ ದಿಕ್ಕಿಗೆ ಸುಮಾರು ೮ ಕಿ. ಮೀ. ದೂರದಲ್ಲಿದೆ. ಕುದುರೆಮುಖ ಪರ್ವತ ಶ್ರೇಣಿಯ ಮಡಿಲಲ್ಲಿರುವ ಒಂದು ಪ್ರಶಾಂತ ವನ ಪ್ರದೇಶದಲ್ಲಿ ಪುರಾತನವೂ, ಪ್ರೇಕ್ಷಣೀಯವೂ ಆದ ಸವಣಾಲು ಎಂಬ ಈ ಜೈನ ಕ್ಷೇತ್ರವಿದೆ. == ವಿಧಿವಿಧಾನ == ಜೈನರೂ, ಜೈನೇತರರೂ, ಅಮಾವಾಸ್ಯೆಯ ದಿನ ಇಲ್ಲಿರುವ ಗುಹಾತೀರ್ಥದಲ್ಲಿ ಮಿಂದು ಇಲ್ಲಿರುವ ಆದೀಶ್ವರ (ಋಷಭದೇವ)ರನ್ನೂ, ಬ್ರಹ್ಮ ಯಕ್ಷನನ್ನೂ ಪೂಜಿಸುತ್ತಾರೆ. == ಆವರಣ == ಅನ್ನಛತ್ರ, ಕ್ಷೇತ್ರ ಮಧ್ಯದಲ್ಲಿ ಹರಿಯುವ ಫಲ್ಗುಣೀ ನದಿ, ನದಿಯ ಇನ್ನೊಂದು ದಡದಲ್ಲಿರುವ ಪುರಾತನ ಆದೀಶ್ವರ ಬಸದಿ, ನೂರಾರು ಮನೆ, ಬಾವಿಗಳು ಕುರುಹುಗಳು ಸುತ್ತಲೂ ಹರಡಿರುವ ಹಸುರು ವನರಾಜಿ, ಸಮೀಪದಲ್ಲಿ ಆಕಾಶವನ್ನೇ ಮುಟ್ಟುವಂತೆ ಕಾಣುವ ಭೂಮಗಾತ್ರದ ಕುದುರೆಮುಖ ಪರ್ವತಗಳು ಇವು ಈ ಕ್ಷೇತ್ರವನ್ನು ಸಂದರ್ಶನೀಯವನ್ನಾಗಿಸಿವೆ. ಆದೀಶ್ವರ ಬಸದಿಯ ಈಶಾನ್ಯ ಮೂಲೆಯಲ್ಲಿ ಕ್ಷೇತ್ರಪಾಲನ ಉಬ್ಬು ವಿಗ್ರಹವೂ ಅಷ್ಟ ದಿಕ್ಷಾಲಕರ ಸ್ತಂಭವೂ ಇವೆ. ಬಸದಿಯ ಸುತ್ತಲೂ ಹಲವಾರು ಕಟ್ಟಡಗಳ ಅಸ್ತಿವಾರಗಳನ್ನು ಕಾಣಬಹುದು. ಬಸದಿಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿರುವ ಆನೆಗಳ ವಿಗ್ರಹಗಳು ಸ್ವಲ್ಪ ವಿಲಕ್ಷಣವಾಗಿದ್ದು ಇವು ಪರಿಷ್ಕೃತ ಶಿಲ್ಪಶೈಲಿಯವುಗಳಲ್ಲ. ಬಂಗರ ರಾಜ ಲಾಂಛನ ಆನೆ. ಬಸದಿಯ ಪ್ರವೇಶ ದ್ವಾರದಲ್ಲಿ ಆನೆಗಳ ವಿಗ್ರಹಗಳಿವೆ. ಅನ್ನ ಛತ್ರದ ವಾಯುವ್ಯ ಮೂಲೆಯಲ್ಲಿ ಸುಂದರವಾದ ಕಲ್ಲು ಕಟ್ಟಿರುವ ೨ ಮೀಟರ್ ಆಳವಿದ್ದರೂ ಸ್ವಚ್ಛವಾದ ನೀರು ತುಂಬಿರುವ ಒಂದು ಬಾವಿ ಇದೆ. == ಇತಿಹಾಸ == ಇದು ಜೈನರ ಪ್ರಥಮ ತೀರ್ಥಂಕರರಾದ ಭಗವಾನ್ ಋಷಭ ದೇವರ ನೆಲೆ.‘ಶ್ರಮಣ' ಮತ್ತು ‘ಶ್ರವಣ' ಎಂಬ ಪದವನ್ನು ಸಾಮಾನ್ಯವಾಗಿ ಜೈನ ಶ್ರಾವಕ (ಗೃಹಸ್ಥ) ಎಂಬ ಅರ್ಥದಲ್ಲಿಯೂ ಉಪಯೋಗಿಸ ಬಹುದೆಂದಾದರೆ, ಶ್ರಮಣರ ಆಲಯ (ವಾಸಸ್ಥಾನ) ಆಗಿದ್ದ ಈ ಪ್ರದೇಶವು ಶ್ರಮಣಾಲಯ ಎಂದು ಮೊದಲು ಕರೆಯಲ್ಪಡುತ್ತಿದ್ದು, ಕ್ರಮೇಣ ಶ್ರಮಣಾಲಯವು ಸಮಣಾಲಯ ಎಂದಾಗಿ ಈಗ ಸವಣಾಲ ಅಥವಾ ಸವಣಾಲು ಎಂದು ಕರೆಯಲ್ಪಡುತ್ತಿದೆ ಎಂದು ತಿಳಿಯಬಹುದು. ಎರಡನೆಯದಾಗಿ, ಪುರಾತನ ಕಾಲದಲ್ಲಿ ಜನ ಜಂಗುಳಿಯ ಸದ್ದು ಗದ್ದಲಗಳಿಂದ ದೂರವಿದ್ದ ಈ ಪ್ರಶಾಂತ ಪ್ರದೇಶವು ತಪಸ್ಸಿಗೆ ಯೋಗ್ಯವಾದ - ಸ್ಥಳವಾಗಿದ್ದುದರಿಂದ ಅನೇಕ ಜೈನ ಶ್ರಮಣರು, ಮುನಿಗಳು ಇಲ್ಲಿಗೆ ಬಂದು ನೆಲೆಸಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿದ್ದರು . ಶ್ರಮಣರ ಆಲಯಗಳಿದ್ದ ಈ ಪ್ರದೇಶವನ್ನು ಶ್ರಮಣಾಲಯ ಅಥವಾ ಕನ್ನಡ ಭಾಷೆಯಲ್ಲಿ ೧ ಸಮಣಾಲಯವೆಂದು, ಕ್ರಮೇಣ ಸವಣಾಲ, ಸವಣಾಲು ಎಂದೂ ಕರೆಯಲಾಯಿತು ಎಂದು ತಿಳಿಯಬಹುದು. == ಗುಹಾ ತೀರ್ಥ == ಗುಹಾ ತೀರ್ಥಕ್ಕೂ ಇಂಥದೇ ಒಂದು ಕಥೆ ಇದೆ. ಶ್ರಮಣರ ಕಮಂಡಲುವಿನಿಂದ ಹರಿದ ನೀರು ಕಲ್ಲುಗಳ ಎಡೆಯಿಂದ ಸಾಗಿ ಕೆಳಗಿರುವ ಗುಹೆಯಲ್ಲಿ ಸುರಿಯತೊಡಗಿತಂತೆ. ಇಂದಿಗೂ ನಿರಂತರವಾಗಿ ಗುಹೆಯಲ್ಲಿ ಸುರಿಯುತ್ತಿರುವ ಈ ನೀರನ್ನು ಪವಿತ್ರ ತೀರ್ಥವೆಂದು ಭಾವಿಸಿ ಪ್ರತಿ ಅಮಾವಾಸ್ಯೆಯಂದು ಅದರಲ್ಲಿ ಸ್ನಾನ ಮಾಡಲಾಗುತ್ತಿದೆ. ಇದುವೇ ಇಲ್ಲಿಯ ಗುಹಾತೀರ್ಥ. == ಬ್ರಹ್ಮ ಯಕ್ಷ == ಈ ಗುಹೆಯ ಪಕ್ಕದಲ್ಲಿರುವ ಒಂದು ಬಂಡೆಕಲ್ಲಿನ ಮೇಲೆ ಇಬ್ಬರು ತೀರ್ಥಂಕರರ ರೇಖಾಕೃತಿಗಳನ್ನು ಬಿಡಿಸಲಾಗಿದೆ. ಇದೇ ಬಂಡೆಯ ದಕ್ಷಿಣ ಪಾರ್ಶ್ವದಲ್ಲಿ ಆಶ್ವಾರೂಢನಾದ ಬ್ರಹ್ಮಯಕ್ಷನ ಆಕೃತಿ ನಾವು ಕಾಣುತ್ತೇವೆ. ಇಲ್ಲಿನ ಜನರ ನಂಬಿಕೆಯಂತೆ ಈ ಬ್ರಹ್ಮಯಕ್ಷನು ಬಹಳ “ಕಾರಣಿಕ” ಉಳ್ಳವನು. ಇಲ್ಲಿನ ಜನರು ಇವನ ಮೇಲೆ ಬಹಳ ಭಯ - ಭಕ್ತಿ ಇಟ್ಟುಕೊಂಡಿರುವರು ಇವನ ಕುರಿತು ಲಘುವಾಗಿ ಮಾತನಾಡುವುದಾಗಲೀ, ಇವನ ಸಾಮರ್ಥ್ಯದ ಕುರಿತು ಪರೀಕ್ಷೆ ಮಾಡುವುದಾಗಲೀ ಇಲ್ಲಿಯ ಜನರು ಧೈರ್ಯ ಪಡದ ವಿಚಾರ. == ವಿನ್ಯಾಸ == ಇಲ್ಲಿ ಶ್ರೀ ಆದೀಶ್ವರ ಸ್ವಾಮಿಯ ವಿಗ್ರಹವು ಬೃಹತ್ ಬಂಡೆಕಲ್ಲುಗಳ ಮೇಲೆ ಉತ್ತರಾಭಿಮುಖವಾಗಿ ನಿಂತಿದೆ. ಇದಕ್ಕೆ ಬಸದಿಯ ಕಟ್ಟಡವಿಲ್ಲ. ಕಪ್ಪಾದ ಬಿಡಿಕಲ್ಲುಗಳ ಪಾಗಾರವೊಂದಕ್ಕೆ ಈ ವಿಗ್ರಹವನ್ನು ತಾಗಿಸಿ ಇಡಲಾಗಿದೆ. ಕಾಯೋತ್ಸರ್ಗ ಭಂಗಿಯಲ್ಲಿರುವ ಈ ಸುಂದರ ಶಿಲಾವಿಗ್ರಹವು ಮೂರು ಅಡಿಗಳಷ್ಟು ಎತ್ತರವಿದೆ. ಸ್ಪಷ್ಟವಾಗಿರದಿದ್ದರೂ ಗೋಮುಖ ಯಕ್ಷ, ಚಕ್ರೇಶ್ವರಿ ಯಕ್ಷಿ ಮತ್ತು ವೃಷಭ ಲಾಂಛನ ಗಳನ್ನು ಗುರುತಿಸಬಹುದಾಗಿದೆ. ವಿಗ್ರಹದ ಶಿರೋಭಾಗವು ಸ್ವಲ್ಪ ಭಿನ್ನವಾಗಿದೆ. ವಿಗ್ರಹಕ್ಕೆ ಅಭಿಷೇಕ ಮಾಡಿದ ತೀರ್ಥವು ಸರಾಗವಾಗಿ ಹರಿದು ಹೋಗಲು ಸಿಂಹ ಪೀಠದ ಕೆಳಗೆ ಒಂದು ಪಾಣಿಪೀಠವಿದೆ. == ಉಲ್ಲೇಖಗಳು ==